Wednesday, 23 December 2020

ಎಷ್ಟು ಚಂದದ ಊರು ಅದು.ಎತ್ತ ನೋಡಿದರೂ ಬೆಟ್ಟಗುಡ್ಡ.ದೂರ ದೂರದಲ್ಲಿ  ತಲೆ ಮಾತ್ರ ತೋರಿಸುವ  ಮನೆಗಳು.ಆ ನಿಸರ್ಗದ ಸೌಂದರ್ಯದ ಮುಂದೆ ನಾನು ಸೋತು ಹೋಗಿದ್ದೆ.ಮೈ ಕೊರೆಯುವ ಚಳಿ,ತಂಪಾದ ಗಾಳಿ.ಅದೇ ಕೊಡಗಿನ ಮಡಿಕೇರಿ ತಾಲೂಕಿನ ಹಮ್ಮಿಯಾಲ-ಮುಟ್ಲು.ಈ ಸಲದ ಗ್ರಾಮ ಪಂಚಾಯಿತಿ ಚುನಾವಣಾ ಕಾರ್ಯಕ್ಕೆ ನನಗೆ ಸಿಕ್ಕಿದ ಮತಗಟ್ಟೆ ಕೇಂದ್ರ.



ಮಾಂದಲಪಟ್ಟಿ ಮಾರ್ಗದಲ್ಲಿ ಸಾಗಿದಾಗ ಕೊಡಗಿನವಳಾಗಿ ನಾನೇ ಆ ಪಕೃತಿಯ ಸೌಂದರ್ಯಕ್ಕೆ ಮರುಳಾದೆ ಅಂದರೆ ,ಹೊರಗಡೆ ಬರುವ ಪ್ರವಾಸಿಗರ ಸಂಖ್ಯೆಹೆಚ್ಚು ಅಂದರೆ  ಆಶ್ಚರ್ಯಪಡಬೇಕಾದ ವಿಷಯವಲ್ಲ.ಅಲ್ಲಿ ಈಗಿನ ಮಕ್ಕಳೆಲ್ಲ ಕೆಲಸಕ್ಕೆನಗರದ ಕಡೆ ಮುಖ ಮಾಡಿ  ಹೋಗಿರುವ ಕಾರಣ,ವಯಸ್ಸಾದವರೇ ಹೆಚ್ಚು ಅಲ್ಲಿ ಇರುವಂತೆ ಕಾಣುತ್ತಿತ್ತು. ಜನರ ಸಂಪರ್ಕ ನಗರದೊಂದಿಗೆ ಕಡಿಮೆ    ಇರುವಂತಹ ಊರು ಅದು.ಮತಗಟ್ಟೆಗೆ ಹೋಗುವ ಮೊದಲು ದೂರದ ಊರು  ಮತ್ತು ಜನರ ಬಗ್ಗೆ ಒಳ್ಳೆಯ ಅಭಿಪ್ರಾಯವೇನು ಹಲವರಿಂದ   ಬರದ ಕಾರಣ ಅಂಜಿಕೆಯಿಂದಲೇ ಹೋದ ನಮ್ಮ ತಂಡಕ್ಕೆ ಅಲ್ಲಿಯ  ಜನರ  ಗೌರವ ,ನಡವಳಿಕೆ ಮತ್ತು ಅವರ ಸಹಾಯಾಕ ಮನೋಭಾವ ಕಂಡು,ಯಾವ ವಿಷಯ ಹಾಗೂ 
ಯಾರ ಬಗ್ಗೆಯೂ ಪೂರ್ವಗ್ರಹಪೀಡಿತ ದೃಷ್ಟಿಕೋನದಿಂದ ನೋಡಬಾರದೆಂದು ಅನಿಸಿದಂತು ನಿಜ.ಒಳ್ಳೆಯ ತಂಡದೊಂದಿಗೆ ಹೋಗಿ,ಸುಮಧುರ ನೆನಪುಗಳನ್ನು ಕಟ್ಟಿಕೊಂಡು ಅಲ್ಲಿಂದ ಬಂದ ನಾನು,ಸಮಯ ಮಾಡಿಕೊಂಡು ಮತ್ತೊಂದು ಸಲ ಆ ಪ್ರಕೃತಿಯ ಸೌಂದರ್ಯ
 ನೋಡಲು ಕುಟುಂಬದೊಂದಿಗೆ ಹೋಗಲೇ ಬೇಕು.
           _ಕೂಡಕಂಡಿ ಪ್ರೀತು ರಾಜೀವ್.

Friday, 21 February 2020

ಧಾರಾವಾಹಿ

  ಮನದಲ್ಲಿ ನೂರಾರು ನೋವುಗಳು
 ಬರೆದು ಹಾಕಿ ಚಿತ್ರಿಸಿದರೆ 
ಆಗಬಹುದು   ಸಾವಿರಾರು ಕಂತಿನ ಧಾರಾವಾಹಿಗಳು.
 
ಪಾತ್ರಧಾರಿಗಳಾಗಿ ಯಾರನ್ನು ಕರೆದು
ಉಪಚರಿಸಲಾರೆ
 ಎಲ್ಲ ಪಾತ್ರಗಳ ಪರಿಚಯ ನಟನೆ
ನಾ ಮಾಡುವುದನ್ನು ಮರೆಯಲಾರೆ
 ನನ್ನಲ್ಲಿ ಹಾಸುಹೊಕ್ಕಾಗಿದೆ ಎಲ್ಲ ಪಾತ್ರಗಳು
  
 ನನ್ನ ಪಾತ್ರ ಮನಮುಟ್ಟಿತು
 ಎಂದು ಹೇಳಿಸಿ ತೃಪ್ತಿಪಡೆಯುವ ಮನಸ್ಸಿಲ್ಲ ನನಗೆ
 ನಾನೇನು ಮಾಡುವೆ ಎಂದು 
ನೋಡಿ ಕಾಲೆಳೆದು ಬೀಳಿಸಲು
 ಬರುವ ಪ್ರೇಕ್ಷಕರು ನಕ್ಕರೆ 
 ಅದೇ ನನಗೆ ಸಂತೋಷ.
 
             
   _ ಕೂಡಕಂಡಿ ಪ್ರೀತು ರಾಜೀವ್.










Saturday, 8 February 2020

ಬತ್ತದಿರಲಿ ಉತ್ಸಾಹ


 ನನ್ನ ಬೆರಳೆಣಿಕೆಯಷ್ಟು  ಆತ್ಮೀಯ
 ಗೆಳೆಯರಲ್ಲಿ 
ಕಾಜೂರು ಸತೀಶ್ ಅವರು ಕೂಡ ಒಬ್ಬರು.
ನಾನು ಬರೆಯುವ  ಸಣ್ಣಪುಟ್ಟ ಬರಹಕ್ಕೆ ಸಲಹೆಗಾರರವರು. ಅವರ ಕಾವ್ಯದಲ್ಲಿನ ಸೂಕ್ಷ್ಮತೆ,ಮಾತಿನಲ್ಲಿನ ಪ್ರಬುದ್ಧತೆ  ಮತ್ತು ಅವರು ಹಲವಾರು ಉತ್ತಮ ಹವ್ಯಾಸಗಳಲ್ಲಿ ತೋರುವ ಆಸಕ್ತಿ ಅವರ ಒಡನಾಟದಲ್ಲಿ ಇರುವ ಎಲ್ಲರನ್ನು ಬೆರಗುಗೊಳಿಸುವಂತಹದು.ಪ್ರಕಟಗೊಂಡ ಅವರ ಎರಡು ಕವನ ಸಂಕಲನಗಳು ಕೂಡ ಪ್ರಶಸ್ತಿಗೆ ಭಾಜನವಾಗಿವೆ ಎನ್ನುವುದು ಹೆಮ್ಮೆಯ ವಿಷಯ.


ಅಂತಹ
ಯುವಕವಿಯಾದ ಕಾಜೂರು ಸತೀಶ್ ಅವರು ಈ ಸಾಲಿನ 85ನೇ ಅಖಿಲ ಭಾರತ ಕನ್ನಡಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಆಯ್ಕೆಯಾಗಿ ರಜೆ ಸಿಗದ ಕಾರಣ ಹೋಗಲು ಸಾಧ್ಯವಾಗಲಿಲ್ಲ ಎಂಬುವುದು ಅವರದೇ ಇಲಾಖೆಯಲ್ಲಿ ದುಡಿಯುವ ನನಗೆ ಬೇಸರ ತಂದಿರುವ ವಿಷಯ.ಒಂದು ತಿಂಗಳ ಹಿಂದೆಯೇ ಸಮ್ಮೇಳನಕ್ಕೆ ಹೋಗುವೇ ಎಂದು ಹೇಳಿದ್ದ ಯುವಕವಿಯ ಉತ್ಸಾಹ ಕಸಿದುಕೊಂಡಿದ್ದು ವಿಷಾದನೀಯ.ಸಾಹಿತ್ಯದಲ್ಲಿ ಆಸಕ್ತಿಯಿರುವರಿಗೆಲ್ಲ ಇದು ನೋವಿನ ಸಂಗತಿ.ಯಾವ ಸನ್ಮಾನಗಳಿಗೆ ಆಸೆಪಡದ ,
ಹೊಗಳಿಕೆ ಮತ್ತು ತೆಗಳಿಕೆಗಳಿಗೆ ಬಾಗದ ವ್ಯಕ್ತಿತ್ವ ಅವರದು.
 ಅದೇ  ವ್ಯಕ್ತಿತ್ವ  ಮುಂದೊಂದು  ದಿನ ಇದಕ್ಕಿಂತ ದೊಡ್ಡದಾದ ವೇದಿಕೆ ಅವರಿಗೆ ಕಲ್ಪಿಸುತ್ತದೆ ಎಂಬ ನಂಬಿಕೆ ನನ್ನಲ್ಲಿದೆ. ಬತ್ತದಿರಲಿ ನಿಮ್ಮ ಉತ್ಸಾಹ.ಶುಭವಾಗಲಿ ಎಂದು ಹಾರೈಸುವೆ.
          - ಕೂಡಕಂಡಿ ಪ್ರೀತು ರಾಜೀವ್.